Monday, January 04, 2016

ದೀನ ದಲಿತರ ಸೇವೆಯಲ್ಲಿ ಸಾರ್ಥಕ ಮೂರು ವರ್ಷಗಳು


        - ಯೂನಿಕ್ ಹ್ಯೂಮನ್ ರೈಟ್ಸ್ ವೆಲ್‍ಫೇರ್ ಅಸೋಸಿಯೇಷನ್ ಟ್ರಸ್ಟ್ ವತಿಯಿಂದ ಅದ್ದೂರಿ ಸಮಾರಂಭ 
ಬೆಂಗಳೂರು, 3 ಜನವರಿ 2016 : ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬುದಕ್ಕೆ ನಗರದ ಕೃಷ್ಣರಾಜ ಪುರಂ ಮುನಿಯಪ್ಪ ಲೇಔಟ್ ನಲ್ಲಿ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಾ ದೀನ ದಲಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯೂನಿಕ್ ಹ್ಯೂಮನ್ ರೈಟ್ಸ್ ವೆಲ್‍ಫೇರ್ ಅಸೋಸಿಯೇಷನ್ ಟ್ರಸ್ಟ್ ಸಾಕ್ಷಿಯಾಗಿದೆ. 
     ತಮ್ಮ ನೆರೆಹೊರೆಯಲ್ಲಿ ವಾಸ ಮಾಡುತ್ತಿರುವ ಅದೆಷ್ಟೋ ಬಡ ಕುಟುಂಬಗಳು ಜೀವನ ನಿರ್ವಹಣೆಗೆ ಸಾಕಷ್ಟು ಕಷ್ಟಪಡುತ್ತಿದ್ದು, ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸ ಮುಂತಾದವುಗಳಿಗಾಗಿ ಪರದಾಡುತ್ತಿರುವುದನ್ನು ಕಣ್ಣಾರೆ ಕಂಡ ಬಿ. ಗಣೇಶ್ ಅವರಿಗೆ ಅಂತಹ ಕುಟುಂಬಗಳ ಸದಸ್ಯರ ನೆರವಿಗಾಗಿ ತಮ್ಮಿಂದಾದ ಕಾರ್ಯ ಕೈಗೆತ್ತಿಕೊಳ್ಳ ಬೇಕೆಂಬ ಯೋಚನೆ ಮೂಡಿಬಂತು. ಅದನ್ನು ತಮ್ಮ ಕೆಲವು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಅವರಿಂದ ದೊರೆತ ಸಕಾರಾತ್ಮಕ ಬೆಂಬಲದಿಂದಾಗಿ ಯೂನಿಕ್ ಹ್ಯೂಮನ್ ರೈಟ್ಸ್ ವೆಲ್‍ಫೇರ್ ಅಸೋಸಿಯೇಷನ್ ಟ್ರಸ್ಟ್ ಸ್ಥಾಪನೆಯಾಯಿತು. 
     ಟ್ರಸ್ಟ್ ವತಿಯಿಂದ ತಮ್ಮ ಸ್ನೇಹಿತರು, ಶ್ರೇಯೋಭಿಲಾಷಿಗಳು, ಬಂಧು ಮಿತ್ರರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಿಂದ ಪ್ರತಿವರ್ಷ ಕೃಷ್ಣರಾಜ ಪುರಂನಲ್ಲಿ ಅದ್ದೂರಿಯಾದ ಸಮಾರಂಭವನ್ನು ಏರ್ಪಡಿಸಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸುವುದಲ್ಲದೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನ್ನ ದಾಸೋಹ ಏರ್ಪಡಿಸುತ್ತಿದ್ದಾರೆ. ಅದರೊಂದಿಗೆ ವಿದ್ಯಾರ್ಥಿಗಳು, ಮಹಿಳೆಯರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ವಿವಿಧ ಬಗೆಯ ಅಗತ್ಯ ವಸ್ತುಗಳು, ಪರಿಕರಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. 
      ಗಣೇಶ್ ರವರ ಈ ಸತ್ಕಾರ್ಯಕ್ಕೆ ಟ್ರಸ್ಟ್‍ನ ಅಧ್ಯಕ್ಷರಾಗಿರುವ ಬಿ.ಲಕ್ಷ್ಮಣ ಕುಮಾರ್, ಉಪಾಧ್ಯಕ್ಷರಾದ ಆರೋಗ್ಯದಾಸ್ ಹಾಗೂ ಸದಸ್ಯರಾದ ಮೂಡಲಗಿರಿಯಪ್ಪ, ಸನಾವುಲ್ಲಾ, ರಾಮ್‍ಬಾಬು, ಮೋಹನ್ ರೆಡ್ಡಿ, ಮಂಜುನಾಥ್, ನಾಗಸಂಕೀರ್ತ, ರಘು, ಇಮ್ರಾನ್ ಪಾಷಾ, ಜಯರಾಮ್, ರಿಜ್ವಾನ್ ಬಾಷಾ, ಇಂಮ್ತಿಯಾಜ್ ಪಾಷಾ, ಮಹಮ್ಮದ್ ಮೆಹಬೂಬ್, ಎಲ್.ಆರ್.ಸಾಯಿರಾಜು, ಗಿರೀಶ್ ಆಚಾರ್, ಜಬೀವುಲ್ಲಾ ಖಾನ್, ರಾಮಚಂದ್ರ, ರಾಜಶೇಖರ್, ಸುಧಾಕರ್, ಯುವರಾಜ್ ಮತ್ತಿತರರು ಕೈ ಜೋಡಿಸಿದ್ದು ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 
      ಅದೇ ರೀತಿಯಲ್ಲಿ ಮೂರನೇ ವರ್ಷದ ಅದ್ದೂರಿ ಸಮಾರೋಪ ಸಮಾರಂಭವನ್ನು ಭಾನುವಾರ ಕೆ.ಆರ್.ಪುರಂ ಹೊಸ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಕೋಟೆ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿತ್ತು. ಬೆಳಗಿನಿಂದ ಸಂಜೆಯವರೆಗೆ ನಡೆದ ಈ ವರ್ಣರಂಜಿತ ಸಮಾರಂಭದಲ್ಲಿ ಮಕ್ಕಳಿಗಾಗಿ ಸ್ಥಳದಲ್ಲಿಯೇ ಚಿತ್ರರಚನೆ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ನೃತ್ಯ, ಕ್ರೀಡೆ ಮತ್ತಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರೊಂದಿಗೆ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನನ್ನು ಏರ್ಪಡಿಸಲಾಗಿತ್ತು. 
        ಇದರೊಂದಿಗೆ ಶ್ರೀ ದಕ್ಷಿಣ ಕೇಸರಿ ಮಾನವ ಸೇವಾಸಂಘ ಹಾಗೂ ಎಂ.ವಿ. ಜೆ. ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ನಡೆಸಲಾಯಿತು ಮತ್ತು ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಉಚಿತ ಕಂಪ್ಯೂಟರ್ ಶಿಕ್ಷಣಾ ಶಿಬಿರವನ್ನು ಈ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಯಿತು. 
      ಈ ಸಮಾರಂಭದ ಅಂಗವಾಗಿ 400ಕ್ಕೂ ಹೆಚ್ಚು ಮಂದಿಗೆ ವಿವಿಧ ಅಗತ್ಯಗಳನ್ನು ಕೊಡುಗೆಂಯಾಗಿ ವಿತರಿಸಲಾಯಿತು. ವಿಕಲ ಚೇತನರಿಗೆ ವ್ಹೀಲ್ ಛೇರ್‍ಗಳು, ಮಹಿಳೆಯರಿಗೆ ಹೊಲಿಗೆ ಯಂತ್ರಗಳು, ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ, ಜಾಮೆಟ್ರಿ ಬಾಕ್ಸ್, ಪೆನ್ಸಿಲ್‍ಗಳು, ಅನಾಥ ಮಕ್ಕಳಿಗೆ ಬಟ್ಟೆಗಳು, ವಯೋವೃದ್ಧರಿಗೆ ಬ್ಲಾಂಕೆಟ್‍ಗಳು ಮತ್ತಿತರೆ ವಸ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಉಚಿತ ಉಪಹಾರ, ಅನ್ನದಾಸೋಹಗಳನ್ನು ಏರ್ಪಡಿಸಲಾಗಿತ್ತು.      
       ಈ ಸಂದರ್ಭವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಯೂನಿಕ್ ಹ್ಯೂಮನ್ ರೈಟ್ಸ್ ವೆಲ್‍ಫೇರ್ ಅಸೋಸಿಯೇಷನ್ ಟ್ರಸ್ಟ್ ಸಂಸ್ಥಾಪಕರಾದ ಬಿ.ಗಣೇಶ್ ಮತ್ತು ಅಧ್ಯಕ್ಷರಾದ ಜಿ.ಲಕ್ಷ್ಮಣ ಕುಮಾರ್, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ, ಮಕ್ಕಳಿಗೆ, ಮಹಿಳೆಯರಿಗೆ ಸೇವೆ ಮಾಡುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ಇದಕ್ಕಾಗಿ ನಮ್ಮ ಸ್ನೇಹಿತರು, ಬಂಧು ಬಾಂಧವರಿಂದ ಸಾಕಷ್ಟು ಬೆಂಬಲ ದೊರೆಯುತ್ತಿದೆ. ನಮ್ಮ ಸಮಾಜ ಸೇವಾ ಚಟುವಟಿಕೆಗಳನ್ನು ಬೆಂಗಳೂರು ನಗರದ ಇತರ ಪ್ರದೇಶಗಳಿಗೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದು, ಅದಕ್ಕಾಗಿ ಹಣದ ಅವಶ್ಯಕತೆ ಬಹಳಷ್ಟಿರುತ್ತದೆ. ಇದುವರೆಗೆ ನಾವು ಸರ್ಕಾರದಿಂದ ಯಾವುದೇ ನೆರವನ್ನು ಬಯಸಿರಲಿಲ್ಲ. ಅದರೆ ನಮ್ಮ ಕೆಲಸ ಕಾರ್ಯಗಳನ್ನು ಗುರುತಿಸಿ ಸರ್ಕಾರ ನೆರವು ನೀಡಿದರೆ ಮತ್ತಷ್ಟು ಉತ್ತೇಜಿತರಾಗಿ ಮುನ್ನಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.