Tuesday, May 24, 2016

ವಿಳಂಬ ದ್ರೋಹ : ಜಲ ಮಂಡಲಿಯ ಮುಖ್ಯ ಅಭಿಯಂತ ಅಮಾನತ್ತು

                                                   
ಬೆಂಗಳೂರು, ಮೇ 24 : ವಿಳಂಬ ದ್ರೋಹ ಎಸಗಿದ ಆರೋಪದ ಮೇರೆಗೆ ಬೆಂಗಳೂರು ಜಲ ಮಂಡಲಿಯ ಯೋಜನೆಗಳ ವಿಭಾಗದ ಮುಖ್ಯ ಅಭಿಯಂತರ ರುದ್ರಮೂರ್ತಿ ಅವರನ್ನು ಅಮಾನತ್ತು ಮಾಡಲು ಆದೇಶಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿತು.
ನಗರದ ಹೆಚ್ ಎಸ್ ಆರ್ ಬಡಾವಣೆಯಲ್ಲಿ 18 ಕೋಟಿ ರೂ ವೆಚ್ಚದ ಸರ್ವೀಸ್ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ನಾಲ್ಕು ವರ್ಷಗಳೇ ಕಳೆದರೂ, ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಯವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಅಧಿಕಾರಿಯನ್ನು ಅಮಾನತ್ತುಗೊಳಿಸಲು ಸ್ಥಳದಲ್ಲಿಯೇ ಆದೇಶಿಸಿದರು.
ಮಳೆಗಾಲ ಪ್ರಾರಂಭವಾಗುವ ಮುನ್ನವೇ ನಗರದ ನಾಗರೀಕರು ಮಳೆಯಿಂದ ಅನುಭವಿಸುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಬೆಂಗಳೂರು ನಗರ ಪ್ರದಕ್ಷಿಣೆಗೆ ತಮ್ಮ ಗೃಹ ಕಚೇರಿ ಕೃಷ್ಣಾದಿಂದ ಮಂಗಳವಾರ ಬೆಳಿಗ್ಗೆ ಹೊರಟ ಸಿದ್ದರಾಮಯ್ಯ ಅವರು ಮೊದಲು ಕಿನೋ ಚಿತ್ರಮಂದಿರದ ಬಳಿಯ ಕೆಳ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಬಾರಿ ಭಾರೀ ಮಳೆಗೆ ನೀರು ತುಂಬಿ ಬಸ್ ಕೂಡಾ ಮುಳುಗುವ ಈ ಪ್ರದೇಶದಲ್ಲಿ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಚರಂಡಿ ನಿರ್ಮಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಡಾಂಬರು ರಸ್ತೆ ಬದಲು ಕಾಂಕ್ರೀಟ್ ರಸ್ತೆ
ನಂತರ, ನಗರದ ವಿಠ್ಠಲ್ ಮಲ್ಯ ರಸ್ತೆಗೆ ತೆರಳಿ ವರುಣನ ಅಬ್ಬರಕ್ಕೆ ತತ್ತರಿಸುವ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣಕ್ಕೆ ಭೇಟಿ ಇತ್ತ ಮುಖ್ಯಮಂತ್ರಿ ಅಲ್ಲಿನ ಹೊಸ ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲಿಂದ ರೆಸಿಡೆನ್ಸಿ ರಸ್ತೆಯ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ ಸಿದ್ದರಾಮಯ್ಯ ಅವರು ಇನ್ನು ಮುಂದೆ ಡಾಂಬರು ರಸ್ತೆಗಳಿಗೆ ಬದಲಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿ. ಸ್ವಲ್ಪ ಹಣ ಹೆಚ್ಚು ವೆಚ್ಚವಾದರೂ ರಸ್ತೆಗಳು ದೀರ್ಘಕಾಲ ಬಾಳಿಕೆಗೆ ಬರುತ್ತವೆ. ಹಂತ ಹಂತವಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಈ ನಿಟ್ಟಿನಲ್ಲಿ ಮುನ್ನಡೆಯುವುದು ಸೂಕ್ತ ಎಂದು ಸ್ಥಳದಲ್ಲಿಯೇ ಹಾಜರಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರಿಗೆ ತಿಳಿಸಿದರು.
ಸಂತೆ ವ್ಯಾಪಾರಿಗಳಿಗೆ ಮಾರುಕಟ್ಟೆ !
ನಗರದ ಮಡಿವಾಳದ ಸಂತೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಿ ಸಂತೆಯ ಸಂದರ್ಭದಲ್ಲಿ ವ್ಯಾಪಾರ ನಡೆಸುತ್ತಿದ್ದ 440 ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸುವ ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಮಡಿವಾಳ ಸಂತೆ ಪ್ರದೇಶದ ರಸ್ತೆಯ ಒಂದು ಬದಿಯಲ್ಲಿ ಮಾರುಕಟ್ಟೆ ಮೈದೇಳಿದರೆ ಮತ್ತೊಂದು ಬದಿಯಲ್ಲಿ 15 ಕೋಟಿ ರೂ ವೆಚ್ಚದಲ್ಲಿ 840 ಮೀಟರ್ ಚತುಷ್ಪಥ ಕಾಂಕ್ರೀಟ್ ರಸ್ತೆ ಸಜ್ಜುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಿಮ್ಯಾಂಡ್ ಹೋಮ್‍ಗೆ ಹಠಾತ್ ಭೇಟಿ
ಅದೇ ರಸ್ತೆಯಲ್ಲಿದ್ದ ವೀಕ್ಷಣಾಲಯಕ್ಕೆ ಹಠಾತ್ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಕಳ್ಳತನ, ಕೊಲೆಯೂ ಒಳಗೊಂಡಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಾಲಾಪರಾಧಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ವೀಕ್ಷಣಾಲಯದಲ್ಲಿದ್ದ ಎಲ್ಲಾ 43 ಬಾಲಾಪರಾಧಿಗಳತ್ತಲೂ ಗಮನಹರಿಸಿದ ಮುಖ್ಯಮಂತ್ರಿಯವರು, ವಾರ್ಡ್‍ನ್ ನಿಮಗೆ ಹೋಡೀತಾರಾ ? ನಿಮಗೆ ಕೊಡುವ ಊಟ ಚೆನ್ನಾಗಿರುತ್ತಾ ? ಎಂದು ಮಾತಿಗೆ ಇಳಿದರಲ್ಲದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದ್ದೀರಿ. ಇನ್ನು ಮುಂದೆಯಾದರೂ ತಪ್ಪು ಮಾಡಲ್ಲ ಎಂದು ಶಪಥ ಮಾಡಿ, ಒಳ್ಳೆಯವರಾಗಿ ಬದುಕಿ ಎಂದು ಕಿವಿಮಾತು ಹೇಳಿದರು.
ಅಲ್ಲಿಂದ ಕೇಂದ್ರ ರೇಷ್ಮೆ ಮಂಡಳಿ ತೆರಳುವಾಗ ಸಂಚಾರ ದಟ್ಟಣೆಯನ್ನು ಕಡಿತಗೊಳಿಸಲು ಸಂಕೇತ-ಮುಕ್ತ ಮೇಲು ಸೇತುವೆ ನಿರ್ಮಾಣ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿದ್ದರಾಮಯ್ಯ ಅವರು 300 ಕೋಟಿ ರೂ ವೆಚ್ಚದಲ್ಲಿ ತಲೆ ಎತ್ತಲಿರುವ ಈ ಮೇಲು ಸೇತುವೆಗೆ 200 ಕೋಟಿ ರೂ ಒದಗಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರಿಗೆ ಹಾಗೂ 100 ಕೋಟಿ ರೂ ಒದಗಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ ಶ್ಯಾಮ್ ಭಟ್ ಅವರಿಗೆ ತಾಕೀತು ಮಾಡಿದರು.
ಉದ್ಯಾನ ನಿರ್ಮಾಣ
ಹೆಚ್ ಎಸ್ ಆರ್ ಬಡಾವಣೆಯಲ್ಲಿ ಗುಡಿಸಲು ನಿವಾಸಿಗಳಿಂದ ಒತ್ತುವರಿಯಾಗಿದ್ದ ಎಂಟು ಎಕರೆ ಸರ್ಕಾರಿ ಭೂಮಿಯಲ್ಲಿ ಸ್ಥಳೀಯ ನಿವಾಸಿ ಹಾಗೂ ಶಾಸಕ ವಿ. ಎಸ್. ಉಗ್ರಪ್ಪ ಅವರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ನಿರ್ಮಿಸಿರುವ ಉದ್ಯಾನದ ಅಭಿವೃದ್ಧಿಗೆ ಸರ್ಕಾರದ ವತಿಯಿಂದಲೂ ನೆರವು ಒದಗಿಸುವ ಭರವಸೆ ನೀಡಿದರು. ಉದ್ಯಾನದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು.
ಕೆರೆ ಒತ್ತುವರಿ ತೆರವುಗೊಳಿಸಲು ಸೂಚನೆ
ನಂತರ, ಇಬ್ಬಲೂರು ಕೆರೆಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು 18.6 ಎಕರೆ ಪ್ರದೇಶದ ಈ ಕೆರೆಯಲ್ಲಿ ಒಂಭತ್ತು ಎಕರೆ ಪ್ರದೇಶವು ಒತ್ತುವರಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಒತ್ತುವರಿ ತೆರವುಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಅವರಿಗೆ ನಿರ್ದೇಶನ ನೀಡಿದರು.
ಬೆಂಗಳೂರಿನಲ್ಲಿ 837 ಕೆರೆಗಳಿವೆ. ಅದರಲ್ಲಿ ಒತ್ತುವರಿಯಾಗಿರುವ ಕೆರೆ ಪ್ರದೇಶದ ವಿಸ್ತೀರ್ಣ 4232 ಎಕರೆ. ಈ ಬಗ್ಗೆ ವಿವರಣೆ ಪಡೆಯಲಾಗುತ್ತಿದೆ ಎಂದರು.
ರೈಲ್ವೇ ಮೇಲು ಸೇತುವೆ
ತದನಂತರ, ಕಗ್ಗದಾಸಪುರದಲ್ಲಿ 27 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾಗಲಿರುವ ರೈಲ್ವೇ ಮೇಲು ಸೇತುವೆ ಪ್ರದೇಶಕ್ಕೆ ಭೇಟಿ ಇತ್ತ ಸಿದ್ದರಾಮಯ್ಯ ಅವರು 650 ಕೋಟಿ ರೂ ವೆಚ್ಚದ ಮೇಲು ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಬಂದಿರುವ ಕೃಷ್ಣರಾಜಪುರ ಪ್ರದೇಶದ ಪರಿಶೀಲನೆ ನಡೆಸಿದರು. ಈ ಪ್ರಸ್ತಾವನೆ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮೆಟ್ರೋ ರೈಲಿನಲ್ಲಿ ಪ್ರಯಾಣ
ನಾಲ್ಕು ತಾಸುಗಳ ತಮ್ಮ ನಗರ ಪ್ರದಕ್ಷಿಣೆಯ ಕೊನೆಯ ಭಾಗವಾಗಿ ಬೈಯ್ಯಪ್ಪನಹಳ್ಳಿಯಿಂದ ವಿಧಾನಸೌಧದವರೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜಕಾಲುವೆಗಳ ಸರ್ವೇಕ್ಷಣೆ
ಬೆಂಗಳೂರಿನಲ್ಲಿ ಎಲ್ಲಾ ರಾಜಕಾಲುವೆಗಳ ಸರ್ವೇಕ್ಷಣೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ ಸಿದ್ದರಾಮಯ್ಯ ಅವರು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ಅಂತೆಯೇ, ತಿಂಗಳಿಗೆ ಒಮ್ಮೆ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಲು ಯೋಜಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ಪ್ರಸಕ್ತ ಸಾಲಿನ ರಾಜ್ಯ ಆಯವ್ಯಯದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ 1500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲು ರಸ್ತೆ ತಮ್ಮ ನಗರ ಪ್ರದಕ್ಷಿಣೆಯ ಫಲಶೃತಿಯೇ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ ಜೆ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಎಂ. ಕೃಷ್ಣಪ್ಪ, ಬಿ. ಎ. ಬಸವರಾಜ್, ಎಸ್. ಟಿ. ಸೋಮಶೇಖರ್, ಮುನಿರತ್ನ, ವಿನಿಷಾ ನೀರೋ, ಬೆಂಗಳೂರು ಮಹಾಪೌರ ಬಿ. ಎನ್. ಮಂಜುನಾಥ ರೆಡ್ಡಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರೂ ಸೇರಿದಂತೆ ಹಲವು ಗಣ್ಯರು ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜೊತೆಗಿದ್ದರು.

Thursday, May 12, 2016

ಜನ-ಮನ : ಸರ್ಕಾರದಿಂದ ಜನಾಭಿಪ್ರಾಯ ಸಮಾವೇಶ !


ಬೆಂಗಳೂರು, ಮೇ 12 : ಪ್ರಸಕ್ತ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಯಶಸ್ಸಿನ ಹಾದಿಯಲ್ಲಿ 3 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮೇ 13 ರ ಶುಕ್ರವಾರ ಸಂಜೆ 4-00 ಗಂಟೆಗೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಾಂಧೀ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.) ದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಮಾವೇಶ ಭವನದಲ್ಲಿ "ಜನ-ಮನ" ಸರ್ಕಾರದಿಂದ ಜನಾಭಿಪ್ರಾಯ ಸಮಾವೇಶವನ್ನು ಹಮ್ಮಿಕೊಂಡಿದೆ.
ಪ್ರಸಕ್ತ ಸರ್ಕಾರವು ಅಧಿಕಾರಕ್ಕೆ ಬಂದ ಪ್ರಥಮ ದಿನವೇ ಘೋಷಣೆ ಮಾಡಿದ ಜನಪರ ಕಾರ್ಯಕ್ರಮಗಳನ್ನು ಪ್ರಥಮ ವರ್ಷವೇ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಹೊಂದಿದೆ. ಮೂರು ವರ್ಷಗಳ ಯಶಸ್ವಿ ಆಡಳಿತ ಪೂರೈಸಿ ನಾಲ್ಕನೇ ವರ್ಷದ ಹೊಸ್ತಿಲಿನಲ್ಲಿ ನಿಂತಿರುವ ಈ ಸುಸಂದರ್ಭದಲ್ಲಿ ಸರ್ಕಾರದ ಕಳೆದ ಮೂರು ವರ್ಷಗಳ ಕಾರ್ಯಕ್ರಮಗಳನ್ನು ಜನತೆಯ ಸಮ್ಮುಖದಲ್ಲಿ ಅವಲೋಕಿಸುವುದು, ಜನಾಭಿಪ್ರಾಯ ಪಡೆಯುವುದು ಈ ಜನಮನ-ಜನಾಭಿಪ್ರಾಯ ಸಮಾವೇಶದ ಆಶಯ. ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತಿ, ವಸತಿ ಭಾಗ್ಯ, ಆರೋಗ್ಯ ಭಾಗ್ಯಗಳಂತಹ ಪ್ರಮುಖ ಯೋಜನೆಗಳಲ್ಲದೆ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೈಗಾರಿಕೆ, ಸಮಾಜ ಕಲ್ಯಾಣ, ಆರೋಗ್ಯ ಕ್ಷೇತ್ರಗಳಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಸರ್ಕಾರ ಬದ್ಧತೆಯಿಂದ ಜಾರಿಗೊಳಿಸಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ ಕೇವಲ ಸಾಧಾರಣ ಸರ್ಕಾರಿ ಯೋಜನೆಗಳಲ್ಲ. ಅನ್ನಭಾಗ್ಯ-ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಬಡಜನರನ್ನು ಹಸಿವಿನಿಂದ ಮುಕ್ತಗೊಳಿಸಿ ರಕ್ಷಿಸಿದ ಯೋಜನೆ. ಅಂತೆಯೇ, ಕ್ಷೀರಭಾಗ್ಯ ಕೂಡ ನಮ್ಮ ಶಾಲಾ ಮಕ್ಕಳನ್ನು ಅಪೌಷ್ಠಿಕತೆಯಿಂದ ಕಾಪಾಡಿ ಪೌಷ್ಠ್ಟಿಕರವಾಗಿರಿಸಿದೆ. ಈ ಎರಡೂ ಯೋಜನೆಗಳು ರಾಜ್ಯದ ಬಡಜನತೆಯನ್ನು ಬರಗಾಲದ ತೀವ್ರತೆಯಿಂದ ಪಾರು ಮಾಡಿದ್ದು, ಸರ್ಕಾರದ ದೂರಗಾಮಿ ಹಾಗೂ ಶಾಶ್ವತ ಪರಿಹಾರದ ಯೋಜನೆಗಳಾಗಿ ಸಾಕ್ಷೀಕೃತಗೊಂಡಿವೆ.
ಜನಮನ – ಜನಾಭಿಪ್ರಾಯ ಸಮಾವೇಶ ಸರ್ಕಾರದ ಸಾಧನೆ ಮತ್ತು ಅದರ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿ ಹಾಗೂ ನ್ಯೂನತೆಗಳನ್ನು ಓರೆಗಲ್ಲಿಗೆ ಹಚ್ಚುವ ಪ್ರಯತ್ನ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಡಳಿತ ಯಂತ್ರಕ್ಕೆ ಮಾರ್ಗದರ್ಶಿ ಸೂತ್ರಗಳಾಗಲಿವೆ.
ಈ ಸಮಾವೇಶಕ್ಕೆ ವಿಶೇಷ ಆಹ್ವಾನಿತರಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಯೋಜನೆಗಳ ಫಲಾನುಭವಿಗಳು ಆಗಮಿಸಿ. ಮಾನ್ಯ ಮುಖ್ಯಮಂತ್ರಿಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸಮಾಜದ ವಿವಿಧ ಸ್ಥರಗಳ ಜನಸಾಮಾನ್ಯರು, ಗಣ್ಯರ ಅಭಿಪ್ರಾಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹಂಚಿಕೊಳ್ಳಲಾಗುವುದು. ಮಾನ್ಯ ಮೂಲಭೂತ ಸೌಲಭ್ಯ ಹಾಗೂ ವಾರ್ತಾ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಅವರು ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಜನ-ಮನ ಜನಾಭಿಪ್ರಾಯ ಸಮಾವೇಶದಲ್ಲಿ ರಾಜ್ಯ ಸಚಿವ ಸಂಪುಟ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಜನಾಭಿಪ್ರಾಯ ಮಂಡನೆಯ ಈ ಕಾರ್ಯಕ್ರಮದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ನಮ್ಮ ಮೆಟ್ರೋ, ಕೃಷಿಭಾಗ್ಯ, ರಾಜೀವ್ ಆರೋಗ್ಯ ಭಾಗ್ಯ, ಶುದ್ಧನೀರು, ಋಣಮುಕ್ತ, ಮನಸ್ವಿನಿ, ಮೈತ್ರಿ, ನಿರ್ಮಲ ಭಾಗ್ಯ ಯೋಜನೆಯ ಫಲಾನುಭವಿಗಳು ಪಾಲ್ಗೊಳ್ಳುವರು.

Tuesday, May 03, 2016

ಎಂಟಿಆರ್ ಫುದ್ಶ್‌ಗೆ ಹೊಸ ಬ್ರಾಂಡ್ ಗುರುತು

ಬೆಂಗಳೂರು, ಮೇ 3, 2016: ಯುವ ಸಮೂಹವನ್ನು ಗುರಿಯಾಗಿಟ್ಟುಕೊಂಡು ಎಂಟಿಆರ್ ಫುಡ್ಸ್ ಪ್ರೈ ಲಿ. ಸಂಸ್ಥೆ ಹೊಸ ಬ್ರಾಂಡ್ ಗುರುತು ಮತ್ತು ಸಮಕಾಲೀನ ಪ್ರಜ್ಞೆಯನ್ನು ಪ್ರತಿಬಿಂಬಿಸುವ ಲೋಗೋವನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ರೀ ಬ್ರಾಂಡಿಂಗ್ ಪ್ರಕ್ರಿಯೆ ಸಕ್ರಿಯ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದೆ. ಹೊಸ ಲೋಗೊ ಮತ್ತು ಪ್ಯಾಕೇಜಿಂಗ್ ತಕ್ಷಣವೇ ಜಾರಿಗೆ ಬರಲಿದೆ. ಮೇ ತಿಂಗಳಲ್ಲಿಯೇ ಹೊಸ ಪ್ಯಾಕ್‍ಗಳು ಮಾರುಕಟ್ಟೆಗೆ ಬರಲಿವೆ.
ಕಳೆದ ಕೆಲವು ವರ್ಷಗಳಿಂದ ಗ್ರಾಹಕರ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಇದಕ್ಕೆ ಪೂರಕವಾಗಿ ಕಂಪೆನಿಯ ಬ್ರಾಂಡ್ ಪೊಸಿಷನಿಂಗ್ ಸಹ ಬದಲಾಗಬೇಕೆಂಬ ಉದ್ದೇಶದಿಂದ ರೀಬ್ರಾಂಡಿಂಗ್ ಮಾಡಲಾಗಿದೆ. ಗ್ರಾಹಕರ ಅಗತ್ಯತೆ ಮತ್ತು ಬಯಕೆಗಳನ್ನು ಗಮನದಲ್ಲಿಟ್ಟುಕೊಂಡು ಎಂಟಿಆರ್ ಫುಡ್ಸ್ ಕಳೆದ ಮೂರು ವರ್ಷಗಳಲ್ಲಿ 44 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ಕಂಪೆನಿಯು ತನ್ನ ಹೊಸ ಇ ವಾಣಿಜ್ಯ ತಾಣವನ್ನೂ ಆರಂಭಿಸಿದ್ದು ಇಲ್ಲಿ ಕಂಪೆನಿಯ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ನೇರವಾಗಿ ಆಯ್ಕೆ ಮಾಡಿ ಖರೀದಿಸಬಹುದು.
ರೀಬ್ರಾಂಡಿಂಗ್‍ನ ಅಗತ್ಯತೆಯನ್ನು ಒತ್ತಿ ಹೇಳಿದ ಎಂಟಿಆರ್ ಫುಡ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಶರ್ಮ ಅವರು “ಇಂದಿನ ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಆಹಾರ ಅಗತ್ಯತೆಗಳು ಮತ್ತು ಬಳಕೆಯ ರೀತಿಯೂ ಬದಲಾಗುತ್ತಿದೆ. ಅವರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಇದರ ಸಿದ್ಧತೆ ತೀರಾ ಕಷ್ಟ ಮತ್ತು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತಾರೆ. ನಮ್ಮ ಬ್ರಾಂಡ್ ಹೊಸ ಬಗೆಯದ್ದಾಗಿದ್ದು, ಬಳಸಲು ಸುಲಭವಾದ, ಪೌಷ್ಠಿಕವಾದ ಮತ್ತು ಅಪ್ಪಟ ರುಚಿಯ ಉತ್ಪನ್ನಗಳು ನಮ್ಮಲ್ಲಿವೆ ಎಂಬುದನ್ನು ಪ್ರಚುರಪಡಿಸುತ್ತದೆ. ಗ್ರಾಹಕರಿಗೆ ಭಾರತೀಯ ಆಹಾರ ಸುಲಭವಾಗಿ, ಸಮಯದ ಪ್ರಶ್ನೆಯಿಲ್ಲದೇ ದೊರೆಯುವಂತೆ ಮಾಡುವ ಪ್ರಯತ್ನ ಮಾಡುತ್ತದೆ” ಎಂದರು.
ಒಂದು ಬ್ರಾಂಡ್ ಆಗಿ ಇಂದು ನಾವು ಬದಲಾದ ನಮ್ಮ ಮುಖ್ಯ ಗ್ರಾಹಕರಿಗೆ ತಕ್ಕಂತೆ ಬದಲಾಗಬೇಕಾಗಿತ್ತು. ಹೊಸ ಬ್ರಾಂಡ್ ಗುರುತು ಇಂದು ಕಂಪೆನಿಯಿರುವ ಸ್ಥಾನವನ್ನು ಪ್ರತಿನಿಧಿಸುತ್ತದೆ. ನಮ್ಮ ವಿವರವಾದ ಅಭಿವೃದ್ಧಿ ಕಾರ್ಯತಂತ್ರ ಮುಂದಿನ ಭವಿಷ್ಯಕ್ಕೆ ಎಂಟಿಆರ್ ಸಿದ್ಧವಾಗಿದೆ ಎಂಬುದನ್ನು ಶ್ರುತಪಡಿಸುತ್ತದೆ. ಎಂಟಿಆರ್ ಫುಡ್ಸ್‍ಗೆ ಇದು ಹೊಸ ಆರಂಭ. ಈ ಬದಲಾಔಣೆಗಳು ಮತ್ತು ನಮ್ಮ ಹೊಸ ಬ್ರಾಂಡ್ ಗುರುತು ನಮ್ಮ ಗ್ರಾಹಕರ ಪ್ರತಿನಿತ್ಯದ ಭಾಗವಾಗಿ ನಮ್ಮನ್ನು ಮಾಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಹೇಳಿದರು.
ಓಕ್ರ್ಲಾ ಫುಡ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಉಪಾಧ್ಯಕ್ಷರಾದ ಆಟ್ಲೆ ವಿದಾರ್ ಮಾತನಾಡಿ ‘ಕಳೆದ ಮೂರು ವರ್ಷಗಳಲ್ಲಿ ಓಕ್ರ್ಲಾ ಫುಡ್ಸ್ ಒಂದು ಪ್ರಮುಖ ನೋರ್ಡಿಕ್ ಬ್ರಾಂಡೆಡ್ ಗ್ರಾಹಕ ಕಂಪೆನಿಯಾಗಿ ಪವಿರ್ತನೆಗೊಂಡಿದೆ. ಇದು ಎಂಟಿಆರ್ ಫುಡ್ಸ್‍ನ ಬೆಳವಣಿಗೆಯಲ್ಲಿ ಸಕಾರಾತ್ಮಕ ಪಾಲುದಾರಿಕೆಯ ಪಾತ್ರ ವಹಿಸಲಿದೆ. ಎಂಟಿಆರ್‍ನಂಥ ಬ್ರಾಂಡ್‍ನ ಮಾಲೀಕರು ನಾವೆನ್ನುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಬ್ರಾಂಡ್‍ನ ಬೆಳವಣಿಗೆ ಮತ್ತು ಗ್ರಾಹಕರ ಒಳನೋಟಕ್ಕೆ ಅನುಗುಣವಾಗಿ ಅದರ ಸುಲಲಿತ ಪರಿವರ್ತನೆಯಲ್ಲಿ ನಾವೂ ಕೊಡುಗೆ ನೀಡುತ್ತೇವೆ. ಹೊಸ ಬ್ರಾಂಡ್ ಗುರುತಿನ ಆರಂಭ ನಮ್ಮ ಪಾಲುದಾರಿಕೆ ಮತ್ತು ಜಂಟಿ ಅಭಿವೃದ್ಧಿಯ ಹಾದಿಯ ಹೆಗ್ಗುರುತಾಗಿದೆ” ಎಂದು ನುಡಿದರು.

‘ಗ್ರಾಮೀಣ ಅಂಗಡಿ’ಯಲ್ಲಿ ಕಿರುಧಾನ್ಯಗಳ ಪ್ರದರ್ಶನ ಮತ್ತು ಮಾರಾಟ

ಗ್ರಾಮೀಣ ಅಂಗಡಿ (ಗ್ರಾಮೀಣ ಕರಕುಶಲ ಉದ್ಯಮದ ಘಟಕ) ಯಿಂದ “ಉತ್ತಮ ಆರೊಗ್ಯಕ್ಕಾಗಿ ಆಹಾರ- ಆಹಾರಕ್ಕಾಗಿ ಕಿರುಧಾನ್ಯಗಳು” ಎಂಬ ಘೋಷಣೆಯಡಿ ರಾಜಾಜಿನಗರ ಮತ್ತು ಜಯನಗರದಲ್ಲಿರುವ ಗ್ರಾಮೀಣ ಅಂಗಡಿಯಲ್ಲಿ ಕಿರುಧಾನ್ಯಗಳ ಪ್ರದರ್ಶನ ಮತ್ತು ಮಾರಾಟವನ್ನು ಏಪ್ರಿಲ್ 4, 2016 ರಿಂದ ಆರಂಭಿಸಲಾಗಿದೆ.

ಪ್ರದರ್ಶನದಲ್ಲಿ ಜೋಳ, ಸಜ್ಜೆ, ನವಣೆ, ಸಾಮೆ, ಆರ್ಕ, ರಾಗಿ, ಊದಲು, ಬರಗು, ಜವೆ, ಗೋದಿ, ಉದ್ದನೆಯ ತಳಿಯ ಅಕ್ಕಿ ಮುಂತಾದ ಶ್ರೇಷ್ಠ ಆಹಾರ ಧಾನ್ಯಗಳು ‘ಗ್ರಾಮೀಣ ಅಂಗಡಿ’ ಯಲ್ಲಿ ದೊರೆಯಲಿವೆ. ಈಗಾಗಲೇ ಗ್ರಾಮೀಣ ಕರಕುಶಲ ಉತ್ಪನ್ನಗಳು ಮತ್ತು ಕೈಮಗ್ಗ ಮತ್ತು ಖಾದಿ ಉತ್ಪನ್ನ ಮಾಡುವ ಕರಕುಶಲ ಕರ್ಮಿಗಳ ಸಬಲೀಕರಣಕ್ಕಾಗಿ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿರುವ “ಗ್ರಾಮೀಣ ಅಂಗಡಿ” ಯಲ್ಲಿ ಈಗ ಕಿರುಧಾನ್ಯಗಳು ಮತ್ತು ಸಾವಯವ ತರಕಾರಿಗಳನ್ನು ನಗರದ ಜನತೆಗೆ ದೊರೆಯುವಂತೆ ಮಾಡಲಾಗಿದೆ.

ಆರೋಗ್ಯಕ್ಕೆ ಮಾರಕವಾಗುವ ಒಂದೇ ತೆರನಾದ ಮೈದಾ ಹಿಟ್ಟಿನಿಂದ ತಯಾರಾಗುವ ಪಿಜ್ಝಾ, ಬರ್ಗರ್, ಬ್ರೆಡ್, ಕೇಕ್, ಕೊಕಾ ಕೋಲಾ, ಪೆಪ್ಸಿ, ಮುಂತಾದ ಅತಿಯಾದ ರಸಾಯನಗಳು ಮತ್ತು ಪ್ರಚೋದಕ ಆಹಾರ ಪದಾರ್ಥಗಳನ್ನು ಬಳಸುವ ಬದಲಿಗೆ ನಮ್ಮ ದೇಹಕ್ಕೆ ಬೇಕಾದ ನಾರು, ಪಿಷ್ಟ, ಪೌಷ್ಠಿಕಾಂಶಗಳ್ಳುಳ ಕಿರು ಆಹಾರ ಧಾನ್ಯಗಳನ್ನು ಉಪಯೋಗಿಸಬೇಕೆಂದು ಗ್ರಾಮಿಣ ಅಂಗಡಿ ಬಳಗ ಜನತೆಯಲ್ಲಿ ಮನವಿ ಮಾಡುತ್ತದೆ.

ಪ್ರದರ್ಶನ ಮತ್ತು ಮಾರಾಟ: ರಾಜಾಜಿನಗರ: ನಂ. 299/45, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್, (ರಾಮ ಮಂದಿರದ ಹಿಂಭಾಗ, ಕೆನರಾ ಬ್ಯಾಂಕ್ ಎದುರು) ರಾಜಾಜಿನಗರ, ಬೆಂಗಳೂರು- 5600010,  ಪೋನ್ 080-23404727, ಜಯನಗರ: ಗ್ರಾಮೀಣ ಅಂಗಡಿ, ನಂ8, 11ನೇ ಮುಖ್ಯ ರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಶ್ಯಾಲಿನಿ ಮೈದಾನದ ಹತ್ತಿರ, ಜಯನಗರ ಬೆಂಗಳೂರು-560048, ಪೋನ್ ನಂ. 080-22441835,ಮೊ: 9448324727