Monday, December 21, 2015

‘ಕೆಂಪೇಗೌಡ’ರ ಮೂಗಿನಡಿಗೇ ಇಟ್ರಲ್ಲಪ್ಪೋ ದುರ್ನಾತ!


- ಕನ್ನಲ್ಲಿ, ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಜನರ ತೀವ್ರ ವಿರೋಧ

- ಡಿ. 21ರಂದು ಭಾರೀ ಪ್ರತಿಭಟನೆಗೆ ಸಜ್ಜು
 
ಬೆಂಗಳೂರು : ಬೆಂಗಳೂರು ನಗರವು ಕಳೆದ ಎರಡು ದಶಕಗಳಿಂದ ಲಂಗೂ ಲಗಾಮು ಇಲ್ಲದೆ ಬೆಳೆಯುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ ಇನ್ನಿತರೆ ಕಾರಣಗಳಿಂದಾಗಿ ಇಲ್ಲಿಗೆ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಅದೇ ವೇಗದಲ್ಲಿಯೇ ಇಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳು, ಗಗನ ಚುಂಬಿಗಳು ತಲೆ ಎತ್ತುತ್ತಿವೆ. 
        ಆದರೆ ಆ ಬೆಳವಣಿಗೆಯ ವೇಗಕ್ಕೆ ನಮ್ಮನ್ನಾಳುವ ಸರ್ಕಾರಗಳು, ಆಡಳಿತ ಸಂಸ್ಥೆಗಳು ಸಜ್ಜು ಗೊಳ್ಳುತ್ತಿಲ್ಲ. ಜನರಿಗೆ ಕನಿಷ್ಟ ಮಟ್ಟದ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ತು, ರಸ್ತೆ, ಚರಂಡಿ ಮೊದಲಾದವುಗಳನ್ನು ಒದಗಿಸಲೇ ಅವು ಹರಸಾಹಸ ಮಾಡುತ್ತಿವೆ. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷಗಳಿಂದ ಪಾಲಕರಿಗೆ ದೊಡ್ಡ ತಲೆನೋವಾಗಿ ಎದುರಾಗಿದೆ ಕಸದ ಸಮಸ್ಯೆ!. 
        ಮೊದಲೆಲ್ಲಾ ನಗರದಲ್ಲಿ ಉತ್ಪತ್ತಿ ಆಗುವ ಕಸವನ್ನು ಊರಾಚೆಗೆ ಕೊಂಡೊಯ್ದು ಎಲ್ಲೋ ಖಾಲೀ ಜಾಗದಲ್ಲಿ ಸುರಿದು ಬರುತ್ತಿದ್ದರು. ಅದು ಮಳೆ, ಗಾಳಿಗೆ ಕೊಳೆತು ಗೊಬ್ಬರವಾಗುತ್ತಿತ್ತು. ಆ ಗೊಬ್ಬರವನ್ನು ಅಕ್ಕ ಪಕ್ಕದ ಹಳ್ಳಿಗಳ ರೈತರು ಖರೀದಿಸಿ ತಮ್ಮ ಹೊಲ, ಗದ್ದೆಗಳಿಗೆ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅದಾಗ ಒಂದು ಸಮಸ್ಯೆ ಆಗಿರಲಿಲ್ಲ. 
        ಆದರೆ ಪ್ಲಾಸ್ಟಿಕ್ ಎಂಬ ಮಹಮ್ಮಾರಿ ಅದ್ಯಾವಾಗ ಕಾಲಿಟ್ಟಿತೋ ನೋಡಿ, ಅಲ್ಲಿಂದಲೇ ಉದ್ಭವವಾಯಿತು ಸಮಸ್ಯೆ. ಎಲ್ಲ ಬಗೆಯ ಗೃಹ ಬಳಕೆ ಸಾಮಗ್ರಿಗಳು, ಆಟಿಕೆಗಳು, ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾಕಿಂಗ್‍ಗೆ ಬಳಸುವ ತೆಳುವಾದ ಪ್ಲಾಸ್ಟಿಕ್ ಕವರುಗಳು, ಕ್ಯಾರಿ ಬ್ಯಾಗ್‍ಗಳು, ಹಾಲಿನ ಕವರ್‍ಗಳು, ನೀರಿನ ಬಾಟಲಿಗಳು ಎಲ್ಲವೂ ಪ್ಲಾಸ್ಟಿಕ್ ಮಯವಾಗಿ ಬಿಟ್ಟಿವೆ. ಈ ಎಲ್ಲ ಬಗೆಯ ಪ್ಲಾಸ್ಟಿಕ್‍ಗಳು ಬಳಕೆಯಾದ ನಂತರ ಕಸಕ್ಕೆ ಸೇರುತ್ತಿವೆ. ಇದರಿಂದಾಗಿ ಕಸವು ಕೊಳೆಯದಂತಾಗಿ ಅದರಿಂದ ಬಿಡುಗಡೆ ಆಗುತ್ತಿರುವ ರಾಸಾಯನಿಕ ಅನಿಲಗಳು ಗಾಳಿಗೆ ಸೇರಿ ದುರ್ಗಂಧಕ್ಕೆ ಕಾರಣವಾವುತ್ತಿವೆ ಅಲ್ಲದೆ ಜನರ ಆರೋಗ್ಯಕ್ಕೂ ಮಾರಕವಾಗುತ್ತಿವೆ. 
        ನಗರವು ವಿಸ್ತಾರವಾಗಿ ಬೆಳೆಯುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳನ್ನೂ ತನ್ನ ತೆಕ್ಕೆಗೆ ಸೇರಿಸಿ ಕೊಳ್ಳುತ್ತಿದೆ. ಅವೂ ಸಹ ನಗರೀಕರಣಗೊಳ್ಳುತ್ತಾ ಅಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದು ಬಿಟ್ಟಿದೆ. ಹೀಗಾಗಿ ಬೆಂಗಳೂರಿನ ಸುತ್ತಮುತ್ತಾ 50-60 ಕಿಲೋಮೀಟರ್ ದೂರದವರೆಗೆ ಎಲ್ಲಿಯೂ ಖಾಲಿ ಜಾಗಗಳೇ ಕಾಣುತ್ತಿಲ್ಲ. ಕಸವನ್ನು ಸುರಿಯಲು ಜಾಗ ಸಿಗುತ್ತಿಲ್ಲ. ಅಲ್ಲದೆ ಒಟ್ಟಾದ ಕಸದಲ್ಲಿ ಸಾವಯವ(ಕೊಳೆಯ ಬಹುದಾದ) ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 
       ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಹೊರವಲಯದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದೆ. ನಗರದ ವ್ಯಾಪ್ತಿಯಲ್ಲಿ ದಿನ ನಿತ್ಯ ಉತ್ಪನ್ನವಾಗುವ ಕಸವನ್ನು ಸಂಗ್ರಹಿಸಿ ಲಾರಿಗಳ ಮುಖಾಂತರ ಸದರಿ ಘಟಕಗಳಿಗೆ ಕೊಂಡೊಯ್ದು ಹಸಿಕಸ ಮತ್ತು ಒಣಕಸಗಳಾಗಿ ಬೇರ್ಪಡಿಸಿ, ಹಸಿಕಸವನ್ನು ಜೈವಿಕ ಅನಿಲ ಮತ್ತು ಕಂಪೋಸ್ಟ್ ಗೊಬ್ಬರವನ್ನಾಗಿ ಮಾರ್ಪಡಿಸಿ, ಪ್ಲಾಸ್ಟಿಕ್ ಆದಿಯಾಗಿ ವಿವಿಧ ಬಗೆಯ ತ್ಯಾಜ್ಯಗಳಿಂದ ಕೂಡಿದ ಒಣಕಸವನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಉಪಯೋಗವಾಗುವ ಉತ್ಪನ್ನಗಳನ್ನು ಮಾಡುವುದು ಅದರ ಉದ್ದೇಶವಾಗಿದೆ. 
        ಮೂಲದಲ್ಲಿಯೇ ಕಸವನ್ನು ಬೇರ್ಪಡಿಸುವಲ್ಲಿ ನಾಗರೀಕರು ಆಸಕ್ತಿ ತೋರದ ಕಾರಣ ನಗರದೆಲ್ಲೆಡೆ ಕಸದ ರಾಶಿಗಳು ಗಬ್ಬೆದ್ದು ನಾರುತ್ತಿದ್ದು, ಅದನ್ನು ಒಟ್ಟುಮಾಡಿ ಸಂಸ್ಕರಣಾ ಘಟಕಗಳಿಗೆ ಸಾಗಿಸುವುದೇ ಬಹಳ ದುಬಾರಿಯ ಮತ್ತು ಪ್ರಯಾಸದ ಕೆಲಸವಾಗಿದೆ. ಮತ್ತೊಂದೆಡೆ ಸಂಸ್ಕರಣಾ ಘಟಕಗಳ ನಿರ್ಮಾಣ ಮತ್ತು ಅವುಗಳಲ್ಲಿ ಬಳಸುತ್ತಿರುವ ಅಸಮರ್ಪಕ ವಿಧಾನಗಳಿಂದಾಗಿ ಸುತ್ತಮುತ್ತಲ ಹಳ್ಳಿಗಳಿಗೆ ಭರಿಸಲು ಅಸಾಧ್ಯವಾದ ದುರ್ಗಂಧ ವ್ಯಾಪಿಸುತ್ತಿದ್ದು ಜನರ ಆರೋಗ್ಯ ಹದಗೆಡಿಸುತ್ತಿರುವುದರ ಜೊತೆಗೆ ನಾನಾ ವಿಧವಾದ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ ಅಲ್ಲಿನ ಜನರು ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಳಿಗೆ ತೀವ್ರ ವಿರೋಧವನ್ನು ತೋರುತ್ತಿದ್ದಾರೆ. 
        ಇದೇ ರೀತಿಯಾಗಿ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಗಡಿ ರಸ್ತೆಗೆ ಹೊಂದಿಕೊಂಡಂತಿರುವ ಕನ್ನಲ್ಲಿ, ಸೀಗೆಹಳ್ಳಿ ಗ್ರಾಮಗಳ ಸೆರಗಿನಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸುತ್ತಿರುವ ಪ್ರತಿಷ್ಟಿತ ಕೆಂಪೇಗೌಡ ಬಡಾವಣೆಯ ಪಕ್ಕದಲ್ಲಿಯೇ ಎರಡು ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಈ ಘಟಕಗಳಿಗೆ ಬಿಬಿಎಂಪಿ ವ್ಯಾಪ್ತಿಯ ಸುಮಾರು 100 ವಾರ್ಡುಗಳಿಂದ ದಿನನಿತ್ಯ ಸುಮಾರು 100ಲಾರಿಗಳಿಗೂ ಹೆಚ್ಚು ಕಸವನ್ನು ಸಾಗಿಸಲಾಗುತ್ತಿದೆ. ಇದರಿಂದಾಗಿ ಆ ಸುತ್ತಲಿನ ಆರು ಗ್ರಾಮ ಪಂಚಾಯತಿಗಳಿಗೆ ಸೇರಿದ ಸುಮಾರು 30 ಹಳ್ಳಿಗಳ ಜನರು ದುರ್ವಾಸನೆ ಮತ್ತಿತರೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. 
 ಕನ್ನಲ್ಲಿ, ಸೀಗೆಹಳ್ಳಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳ ಸುತ್ತಮುತ್ತ ಕೊಡಿಗೇಹಳ್ಳಿ, ಸೂಲೀಕೆರೆ, ಚನ್ನೇನಹಳ್ಳಿ, ಕಡಬಗೆರೆ, ಮಾಚೋಹಳ್ಳಿ ಮತ್ತು ಕಾಚೋಹಳ್ಳಿ ಪಂಚಾಯ್ತಿಗಳಿಗೆ ಸೇರಿದ ಸುಮಾರು 30 ಹಳ್ಳಿಗಳಿದ್ದು ಸಾವಿರಾರು ಜನರು ವಾಸಮಾಡುತ್ತಿದ್ದಾರೆ. 
 ಘಟಕಗಳಿಗದ ಹೊರಬರುತ್ತಿರುವ ದುರ್ವಾಸನೆ ಮತ್ತು ಹೆಚ್ಚುತ್ತಿರುವ ನೊಣ, ಸೊಳ್ಳೆಗಳ ಕಾಟದಿಂದಾಗಿ ಜನರು ಜೀವಿಸುವುದೇ ಕಷ್ಟವಾಗುತ್ತಿದೆ. 
 ಘಟಕಗಳಿಂದ ಹೊರಬರುವ ವಿಷಕಾರಕ ಗಾಳಿಯ ಸೇವನೆಯಿಂದ ಜನರ ಆರೋಗ್ಯ ಹದಗೆಡುತ್ತಿದ್ದು ಚರ್ಮರೋಗಗಳು, ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಪ್ರಕಾರ ಈ ಕೆಲವು ತಿಂಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿದೆ. 
 ಘಟಕಗಳಿಂದ ಹೊರಬೀಳುವ ಮಲಿನವಾದ ನೀರು ಭೂಮಿಗೆ ಸೇರಿ ಅಂತರ್ಜಲವನ್ನು ಮಲಿನ ಗೊಳಿಸುತ್ತಿದೆ. ಅದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುವುದು ನಿಶ್ಚಿತ. 
 ಘಟಕಗಳ ಸುತ್ತಮುತ್ತ ಹಲವು ಸರ್ಕಾರಿ ಶಾಲೆಗಳಲ್ಲದೆ ಸುಮಾರು 10 ಪ್ರತಿಷ್ಟಿತ ಖಾಸಗಿ ಶಾಲಾ ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಅವುಗಳಲ್ಲಿ ಕಲಿಯುತ್ತಿದ್ದಾರೆ. 
 ಎರಡು ಘಟಕಗಳ ಮಧ್ಯದಲ್ಲಿ ಬಿಎಂಟಿಸಿ ಘಟಕ.35(ಕನ್ನಲ್ಲಿ ಘಟಕ) ಇದ್ದು ಅದರಲ್ಲಿ ಚಾಲಕರು, ನಿರ್ವಾಹಕರು ಸೇರಿ ಸುಮಾರು 700ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಿಬ್ಬಂದಿಗಾಗಿ ಘಟಕದ ಆವರಣದಲ್ಲಿಯೇ ನಿರ್ಮಿಸಿರುವ ಸುಮಾರು 30 ವಸತಿಗೃಹಗಳಲ್ಲಿ ಸುಮಾರು ಸಾವಿರ ಜನ ವಾಸವಾಗಿದ್ದಾರೆ. 
 ಇಲ್ಲಿನ ಖಾಸಗಿ ಕಂಪನಿಗಳಲ್ಲಿ ಸುಮಾರು 3ಸಾವಿರ ಜನ ಕೆಲಸ ಮಾಡುತ್ತಿದ್ದು, ದುರ್ವಾಸನೆಯನ್ನು ಸಹಿಸಲಾಗದೆ ಕೆಲಸ ತೊರೆಯುತ್ತಿದ್ದಾರೆ. ಹೀಗಾಗಿ ಕಂಪನಿಗಳು ಮುಚ್ಚುವ ಸ್ಥಿತಿ ತಲುಪಿವೆ. 
 ಬಿಡಿಎ ಸುಮಾರು 4ಸಾವಿರ ಎಕರೆ ಪ್ರದೇಶದಲ್ಲಿ ಪ್ರತಿಷ್ಟಿತವಾಗಿ ನಿರ್ಮಿಸುತ್ತಿರುವ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದಾದ ನಾಡಪ್ರಭು ಕೆಂಪೇಗೌಡ ಬಡಾವಣೆಯು ಈ ಘಟಕಗಳಿಂದ ಕೂಗಳತೆ ದೂರದಲ್ಲಿದೆ. ಭವಿಷ್ಯದಲ್ಲಿನ ಅಲ್ಲಿ ಮನೆ ನಿರ್ಮಿಸಿಕೊಳ್ಳುವ ಜನರಿಗೂ ಈ ಘಟಕಗಳಿಂದ ತೊಂದರೆ ತಪ್ಪಿದ್ದಲ್ಲ. 
        ಈ ಹಿನ್ನೆಲೆಯಲ್ಲಿ ಕನ್ನಲ್ಲಿ, ಸೀಗೇಹಳ್ಳಿ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಿರುವ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಕೂಡಲೆ ಮುಚ್ಚುವಂತೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು ಒಂದಾಗಿ ಪರಿಸರ ಸಂರಕ್ಷಣಾ ಸಮಿತಿಯನ್ನು ಏರ್ಪಡಿಸಿಕೊಂಡು ಹೋರಾಟಕ್ಕಿಳಿದಿದ್ದಾರೆ. ಇದೇ ಸೋಮವಾರ ದಿನಾಂಕ: 21-12-2015ರಂದು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಾ ಸೀಗೇಹಳ್ಳಿ ಗೇಟ್‍ಬಳಿ ಪ್ರತಿಭಟನೆಗೆ ಸಜ್ಜಾಗಿದ್ದು ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಯಾವುದೇ ಹಂತಕ್ಕೆ ಕೊಂಡೊಯ್ಯಲು ತಾವೆಲ್ಲರೂ ಸಿದ್ಧವಾಗಿರುವುದಾಗಿ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಚನ್ನಪ್ಪ, ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಶಾಂತರಾಜು ಎಚ್ಚರಿಸಿದ್ದಾರೆ.

( ಎ.ಸೀತಾರಾಮ ಶಾಸ್ತ್ರಿ. ಮೊಬೈಲ್ ಸಂಖ್ಯೆ- 9481036870

Tuesday, December 15, 2015

ಪಾವಗಡ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಧನ ಸಹಾಯ ಅಗತ್ಯ

ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಭಾನುವಾರ ನಡೆದ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಲಂಡನ್‍ನ ಸುಪ್ರಸಿದ್ದ ವೈದ್ಯ ಡಾ|| ಪ್ರಭಾಕರ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಬಿ.ವಿ. ಪತಿ, ಕಾರ್ಯದರ್ಶಿ ವೆಂಕಟರೆಡ್ಡಿ, ಸಂಘಟನಾ ಕಾರ್ಯದರ್ಶಿ ಆರ್.ಪಿ.ಎಸ್. ರೆಡ್ಡಿ, ಡಾ. ಪರಮೇಶ್ ನಾಯಕ್,  ಸದಸ್ಯರಾದ ಕೃಷ್ಣಪ್ಪ, ಸುಬ್ಬರಾಯಪ್ಪ ಮುಂತಾದವರು ಚಿತ್ರದಲ್ಲಿದ್ದಾರೆ.
--------------------------------------------------------------------------------------------------------------------------
ಬೆಂಗಳೂರು: ಶೈಕ್ಷಣಿಕ ಪ್ರಗತಿ ಸಾಧಿಸಲು ಉದಾರವಾದ ಧನ ಸಹಾಯ ಮಾಡುವ ಮೂಲಕ ಕೇರಳದಂತೆ ಪಾವಗಡವನ್ನು ಮಾದರಿ ತಾಲ್ಲೂಕನ್ನಾಗಿ ಪರಿವರ್ತನೆ ಮಾಡುವಲ್ಲಿ ಸಹೃದಯ ದಾನಿಗಳು ಮುಂದಾಗಬೇಕು ಎಂದು ಲಂಡನ್‍ನ ಸುಪ್ರಸಿದ್ದ ವೈದ್ಯ ಡಾ|| ಪ್ರಭಾಕರ್ ರೆಡ್ಡಿ ಕರೆ ನೀಡಿದರು.
ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪಾವಗಡ ತಾಲ್ಲೂಕಿನಲ್ಲಿ ತುಂಬಿರುವ ಅನಕ್ಷರತೆಯನ್ನು ತೊಡೆದು ಹಾಕುವಲ್ಲಿ ನಾವೆಲ್ಲರೂ ಉದಾರವಾಗಿ ಧನ ಸಹಾಯ ಮಾಡಬೇಕು ಎಂದು ಮನವಿಮಾಡಿದರು. 
ಅನಾಥನಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ಅನೇಕರಿದ್ದಾರೆ.  ಅದರಲ್ಲಿ ನಿಲ್ಲುವ ಮೊದಲಿಗರೆಂದರೆ ಪಾವಗಡ ಸುಬ್ಬರಾಯಪ್ಪ  ನನ್ನನ್ನು ಮನೆಯಲ್ಲಿ ಇರಿಸಿಕೊಂಡು ಓದಿಸಿ ವಿದ್ಯೆ ಕಲಿಯಲು ಸಹಾಯಮಾಡಿದ್ದಾರೆ. ಇಂಥವರನೇಕರಿಂದ ನಾನು ಹಿಮಾಲಯದಷ್ಟು ಬೆಳೆದಿದ್ದೇನೆ. ಅವರ ಋಣ ತೀರಿಸಲು ಅವರ ಹೆಸರಿನಲ್ಲಿ 1 ಲಕ್ಷ.ರೂ ದೇಣಿಗೆ ನೀಡುತ್ತಿದ್ದೇನೆ ಎಂದರು.
ನನ್ನ ವಿನಂತಿಯೆಂದರೆ ಧನ ಸಹಾಯ ಪಡೆದುಕೊಂಡು ಜೀವನ ಕಟ್ಟಿಕೊಂಡವರು ಅವರ ಸಂಪಾದನೆಯ ಸ್ವಲ್ಪ ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಹಾಯಮಾಡಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ನೆರೆದಿದ್ದ ಸದಸ್ಯರು ಮತ್ತು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಪಾವಗಡ ಮೂಲದವರಾದ ಬೆಂಗಳೂರು ಮಹಾನಗರ ಪಾಲಕೆಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ನರಸಿಂಹನಾಯಕ್ ಅವರು ಮಾತನಾಡಿ, ಸಮಾಜ ಸೇವೆ ಮಾಡಬೇಕೆಂದೆ ಸ್ಥಾಪನೆಯಾಗಿರುವ ಈ ಸಂಸ್ಥೆಗೆ ಶಾಶ್ವತ ಕಟ್ಟಡದ ಅಗತ್ಯವಿದೆ ಅದಕ್ಕಾಗಿ ನಿವೇಶನ ಪಡೆಯಲು ಸಂಸ್ಥೆ ಪ್ರಯತ್ನ ಪಟ್ಟರೆ  ನಾನೂ ಸಹ ಸಹಕರಿಸಿವುದಾಗಿ ಭರವಸೆ ನೀಡಿದರು.
ಈ ಸಂಸ್ಥೆಯು ಪ್ರತಿವರ್ಷ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನೀವು ಮಾಡುತ್ತಿರುವ ಈ ಕೈಂಕರ್ಯಕ್ಕೆ ನನ್ನ ಬೆಂಬಲ ಸದಾ ಇರುತ್ತದೆ.  ಅತಿ ಹಿಂದುಳಿದಿರುವ ಪಾವಗಡ ತಾಲ್ಲೂಕು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಮತ್ತು ಪ್ಲೋರೈಡ್ ಅಂಶವುಳ್ಳ ನೀರಿನ್ನು ಸಂಸ್ಕರಿಸುವ ವಿಧಾನಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.  ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಡಾ: ಪ್ರಭಾಕರ ರೆಡ್ಡಿ ರವರ ಕಷ್ಟಕಾಲದಲ್ಲಿ ಸಹಾಯ ಮಾಡಿದ ನಿವೃತ್ತ ನ್ಯಾಯಾದೀಶ ಟಿ.ಜೆ. ಮರಿಯಪ್ಪ, ಉದ್ಯಮಿ ಡಿ.ಕೆ. ರೆಡ್ಡಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿ.ಆರ್. ನಾಯ್ಡು ಅವರ ಹೆಸರಿನಲ್ಲಿ ತಲಾ ಒಂದು ಲಕ್ಷ ದೇಣಿಗೆ ನೀಡಿದ್ದಕ್ಕೆ ಅವರೆಲ್ಲರನ್ನೂ ಸಂಸ್ಥೆಯ ಮಹಾಪೋಷಕರನ್ನಾಗಿ ಹಾಗೂ ಡಾ| ಕೆ.ವಿ. ಶಶಿಕಲಾ ಮತ್ತು ನರಸಿಂಹಪ್ಪ ರವರುಗಳು ತಲಾ ರೂ 50000 ನೀಡಿದ್ದಕ್ಕೆ ಪೋಷಕನ್ನಾಗಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಷ್ಕøತರಾಗಿರುವ ಆರ್.ಪಿ.ಎಸ್. ರೆಡ್ಡಿ, ಬಿಬಿಎಂಪಿ ಸದಸ್ಯ ನರಸಿಂಹನಾಯಕ್ ಹಾಗೂ ಹೋಂಗಾಡ್ರ್ಸ್ ಸೇವೆಯಲ್ಲಿ ರಾಷ್ಟ್ರಪತಿ ಪದಕ ಪಡೆದ ಅಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.  ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಮಾರಂಭದ ಅದ್ಯಕ್ಷತೆಯನ್ನು ಕೆ.ಬಿ.ವಿ ಪತಿ ವಹಿಸಿದ್ದರು. ಸಂಘಟನಾ  ಕಾರ್ಯದರ್ಶಿ ಆರ್.ಪಿ. ಸಾಂಬಸದಾಶಿವ ರೆಡ್ಡಿ ಸ್ವಾಗತಿಸಿದರು.  ಕಾರ್ಯದರ್ಶಿ ವೆಂಕಟರೆಡ್ಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪಾದ್ಯಕ್ಷ ಡಾ: ಎ ಪ್ರಭಾಕರ, ಖಜಾಂಚಿ ಬಾಲಪ್ಪ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಪರಮೇಶ್ವರ್ ನಾಯಕ್ ನಿರೂಪಿಸಿದರು.  ಆರ್. ಕೃಷ್ಣಪ್ಪ ವಂದಿಸಿದರು.

Monday, December 14, 2015

ನಾರಾಯಣ ಹೃದಯಾಲಯದಿಂದ ಸಾರ್ವಜನಿಕ ಷೇರು ವಿತರಣೆ


- ಡಿಸೆಂಬರ್ 17, 2015ರಂದು ಆರಂಭ
- ದರ ಪಟ್ಟಿ ಪ್ರತಿ ಈಕ್ವಿಟಿ ಷೇರಿಗೆ ರೂ. 245   ರಿಂದ ರೂ. 250

ಬೆಂಗಳೂರು: ನಾರಾಯಣ ಹೃದಯಾಲಯ ಲಿಮಿಟೆಡ್ (ದ ಕಂಪೆನಿ ಅಥವಾ ಇಷ್ಯುಯರ್) ಈಗ ಸಂಬಂಧಿಸಿದವರ ಅನುಮೋದನೆ ಕಾದಿರಿಸಿ, ವಿವರಣಾ ಪತ್ರಿಕೆಯ ಮೂಲಕ ಸಾರ್ವಜನಿಕ ಷೇರು ವಿತರಣೆಯನ್ನು ಆರಂಭಿಸಲು ಡಿಸೆಂಬರ್ 8, 2015ರಂದು ನೋಂದಣಿ ಮಾಡಿದ್ದು, ತಲಾ ರೂ. 10 ಮುಖಬೆಲೆಯ 24,523,297 ಈಕ್ವಿಟಿ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ ರೂ. 245 ರಿಂದ ರೂ.250ರ ದರಪಟ್ಟಿಯಲ್ಲಿ ವಿತರಿಸಲು ಆಹ್ವಾನಿಸಿದೆ. ಇದರಲ್ಲಿ ಷೇರು ಪ್ರೀಮಿಯಂ ಸೇರಿದ್ದು, ಒಟ್ಟು 6,287,978 ಈಕ್ವಿಟಿ ಷೇರುಗಳನ್ನು ಅಶೋಕಾ ಇನ್‍ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ; 1,886,455 ಈಕ್ವಿಟಿ ಷೇರುಗಳನ್ನು ಅಂಬಾದೇವಿ ಮಾರಿಷಸ್ ಹೋಲ್ಡಿಂಗ್ ಕಂಪೆನಿ ಮೂಲಕ; 12,261,648 ಈಕ್ವಿಟಿ ಷೇರುಗಳನ್ನು ಜೆಪಿ ಮಾರ್ಗನ್ ಮಾರಿಷಸ್ ಹೋಲ್ಡಿಂಗ್ v1ಲಿಮಿಟೆಡ್ ಮೂಲಕ (ದಿ ಇನ್‍ವೆಸ್ಟರ್ ಸೆಲ್ಲಿಂಗ್ ಷೇರ್‍ಹೋಲ್ಡರ್ಸ್) ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಶಕುಂತಲಾ ಶೆಟ್ಟಿ ಅವರ ಮೂಲಕ (ಪ್ರೊಮೋಟರ್ ಸೆಲ್ಲಿಂಗ್ ಶೇರ್ ಹೋಲ್ಡರ್ಸ್) ಮೂಲಕ ( ಒಟ್ಟಾಗಿ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ (ಮಾರಾಟಕ್ಕಾಗಿ ಕೊಡುಗೆ) ಸೇರಿದೆ. ಇದು ಆಹ್ವಾನ ಪೂರ್ವದ ಷೇರು ಬಂಡವಳಾದ ಶೇ 12ರಷ್ಟು ಆಗಿದೆ.
ಕನಿಷ್ಠ ಬಿಡ್ ಲಾಟ್ 60 ಈಕ್ವಿಟಿ ಷೇರುಗಳಾಗಿದ್ದು, ಆ ಬಳಿಕ 60ರ ಗುಣಕದಲ್ಲಿ ಖರೀದಿ ಮಾಡಬಹುದು. ಕಂಪೆನಿ, ಸೆಲ್ಲಿಂಗ್ ಶೇರ್‍ಹೋಲ್ಡರ್‍ಸ್‍ಗಳು ಬಿಆರ್‍ಎಲ್‍ಎಂ ಜೊತೆಗೆ ಚರ್ಚಿಸಿ, ಭಾಗವಹಿಸುವ ಆ್ಯಂಕರ್ ಹೂಡಿಕೆದಾರನ್ನು ನಿರ್ಧರಿಸಬಹುದು.
ಆ್ಯಂಕರ್ ಹೂಡಿಕೆದಾರರಲ್ಲಿ ಆ್ಯಂಕರ್ ಹೂಡಿಕೆ ಬಿಡ್ಡಿಂಗ್ ದಿನವನ್ನು ಹೂಡಿಕೆ ದಿನ ಅಥವಾ ಅದರ ಒಂದು ದಿನ ಮೊದಲು ಮಾಡಬಹುದು. ಬಿಡ್ಡಿಂಗ್ ಡಿಸೆಂಬರ್ 21,2015ರಂದು ಅಂತ್ಯವಾಗಲಿದೆ. ಈಕ್ವಿಟಿ ಷೇರುಗಳುನ್ನು ಬಿಎಸ್‍ಇ ಲಿಮಿಟೆಡ್ ಮತ್ತು ರಾಷ್ಟ್ರೀಯ ಷೇರು ವಿತರಣಾ ಲಿಮಿಟೆಡ್ (ಎನ್‍ಎಇ) ಅಲ್ಲಿ ನೋಂದಣಿ ಮಾಡಲಾಗಿದೆ.
ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಸ್ (ಬಿಆರ್‍ಎಲ್‍ಎಂ) ಆಗಿ ಆ್ಯಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, ಐಡಿಎಫ್‍ಸಿ ಸೆಕ್ಯೂರಿಟೀಸ್ ಲಿಮಿಟೆಡ್ ಮತ್ತು ಜೆಫೆರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಯ ನಿರ್ವಹಿಸಲಿದೆ.
ಈ ಷೇರು ಆಹ್ವಾನವನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಯಮ 26(1)ರ ಅನ್ಯವ ಮಾಡಲಾಗುತ್ತಿದೆ. ಬುಕ್ ಬಿಲ್ಡಿಂಗ್ ಪ್ರಾಸೆಸ್ ಮೂಲಕ ಮಾಡಲಿದ್ದು, ಈ ಪೈಕಿ ಶಏ 50ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರಿಗೆ ಹಂಚಿಕೆ ಮಾಡಲಾಗುತ್ತದೆ. ಕಂಪನಿ ಅಥವಾ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ ಶೇ 60ರಷ್ಟು ಕ್ಯೂಐಬಿ ಭಾಗವನ್ನು ಆ್ಯಂಕರ್ ಹೂಡಿಕೆದಾರರನ್ನು ತಮ್ಮ ವಿವೇಚನಾ ಅನುಸಾರ ನಿಗದಿಪಡಿಸಬಹುದಾಗಿದೆ.
ಈ ಪೈಕಿ ಮೂರನೇ ಒಂದು ಭಾಗದಷ್ಟು ಭಾಗವನ್ನು ಅರ್ಹ ದೇಶಿಯ ಮ್ಯೂಚುವಲ್ ಫಂಡ್‍ನಿಂದ ಬಿಡ್‍ಬರಲಿದೆ ಎಂಬುದನ್ನು ಕಾದಿಸಿರಿ ಮ್ಯೂಚುವಲ್ ಫಂಡ್‍ಗೆ ಮೀಸಲಾಗಿ ಇರಿಸಲಾಗಿದೆ. ಕ್ಯೂಐಬಿ ಭಾಗದ ಶೇ 5ರಷ್ಟನ್ನು (ಆ್ಯಂಕರ್ ಹೂಡಿಕೆಯನ್ನು ಹೊರತುಪಡಿಸಿ) ಮ್ಯೂಚುವಲ್ ಫಂಡ್‍ಗಳಿಗೆ ಅನುಪಾತದ ಪ್ರಮಾಣವನ್ನು ಆಧರಿಸಿ ಕಾದಿರಿಸಲಾಗುತ್ತದೆ. ಅಲ್ಲದೆ, ಶೇ 15ಕ್ಕೆ ಮೀರದಂತೆ ಷೇರುಗಳು ಸಾಂಸ್ಥಿಕೇತರ ಅರ್ಹ ಬಿಡ್‍ದಾರರಿಗೆ ಹಂಚಿಕೆಗೆ ಲಭ್ಯವಿದೆ; ಶೇ 35ಕ್ಕೆ ಕಡಿಮೆ ಇಲ್ಲದಂತೆ ಷೆರುಗಳು ಬಿಡಿ ವ್ಯಕ್ತಿಗತ ಬಿಡ್‍ದಾರರಿಗೆ ಸೆಬಿ, ಐಸಿಡಿಆರ್ ನಿಯಮಾನುಸಾರ ಹಂಚಿಕೆಗೆ ಲಭ್ಯವಿದೆ. ಎಲ್ಲ ಅರ್ಹ ಹೂಡಿಕೆದಾರರು, ಆ್ಯಂಕರ್ ಹೂಡಿಕೆದಾರರನ್ನು ಹೊರತುಪಡಿಸಿ, ಈ ವಿತರಣೆಯಲ್ಲಿ ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್ (ಎಎಸ್‍ಬಿಎ) ಮೂಲಕ ಭಾಗವಹಿಸಬಹುದು. ಕ್ಯೂಐಬಿಗಳು (ಆ್ಯಂಕರ್ ಹೂಡಿಕೆದಾರರನ್ನು ಹೊತತಪಡಿಸಿ) ಸಾಂಸ್ಥಿಕೇತರ ಬಿಡ್‍ದಾರರು ಕಡ್ಡಾಯವಾಗಿ ಎಎಸ್‍ಬಿಎ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ.
ಮುಖ್ಯ ಪ್ರವರ್ತಕರಾದ ಡಾ. ದೇವಿ ಪ್ರಸಾದ್ ಶೆಟ್ಟಿಅವರು 2000ರಲ್ಲಿ ಸ್ಥಾಪಿಸಿದ ಸಂಸ್ಥೆಯು ವೈದ್ಯಕೀಯ ಸೇವೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು, ಕಂಪೆನಿಯು ಭಾರತದಲ್ಲಿ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ದಿನದಂದು ಆಸ್ಪತ್ರೆಯು 23 ನೆಟ್‍ವರ್ಕ್ ಆಸ್ಪತ್ರೆಗಳು (ಮಲ್ಟಿ ಸ್ಪೆಷಾಲಿಟಿ), 8 ಆರೋಗ್ಯ ಕೇಂದ್ರಗಳು (ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು), 24 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಲಿನಿಕ್‍ಗಳು, ಮಾಹಿತಿ ಕೇಂದ್ರಗಳು ಸೇರಿವೆ. 31 ನಗರಗಳು, ಪಟ್ಟಣಗಳಲ್ಲಿ ವ್ಯಾಪಿಸಿರುವ ಇದು 5,442 ಕಾರ್ಯ ನಿರ್ವಹಣಾ ಬೆಡ್‍ಗಳನ್ನು ಹೊಂದಿದೆ. 2015ನೇ ಹಣಕಾಸು ವರ್ಷದಲ್ಲಿ 1.97 ಮಿಲಿಯನ್ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ದಕ್ಷಿಣ ಕರ್ನಾಟಕದಲ್ಲಿ ದೃಢವಾದ ಅಸ್ತಿತ್ವ ಹೊಂದಿದೆ. ಸೆಪ್ಟೆಂಬರ್ 30, 2015ರಲ್ಲಿ ಇದ್ದಂತೆ ಆಸ್ಪತ್ರೆಯು 3,236 ಆಡಳಿತ ವ್ಯಕ್ತಿಗಳನ್ನು ಹೊಂದಿದೆ. ಹೆಚ್ಚುವರಿಯಾಗಿ 487 ವಿದ್ಯಾರ್ಥಿಗಳು, 469 ವೈದ್ಯರು, 14 ಅರೆವೈದ್ಯಕೀಯ ಸಿಬ್ಬಂದಿ ಹಾಗೂ 4 ಆಡಳಿತ ತರಬೇತಿದಾರರು ಇದ್ದಾರೆ. ಉಳಿದಂತೆ, 1,750 ವೈದ್ಯರು ಕನ್ಸಲ್ಟೆನ್ಸಿ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Saturday, December 12, 2015

ಡಿ.13ರಂದು ಸತ್ಸಂಗ ಶ್ರೀ ಮಂದಿರದ ಪ್ರಥಮ ವಾರ್ಷಿಕೋತ್ಸವ ಆಚರಣೆ



ಜೀವನ ಮತ್ತು ವರ್ಧನಎಂಬ ಮೂಲಮಂತ್ರದೊಂದಿಗೆ ಮನುಷ್ಯನ ಜೀವನವನ್ನು ಆನಂದ ಪಥದತ್ತ ಸಾಗಲು ನೆರವಾಗುವಂತೆ ಧಾರ್ಮಿಕ ,ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಭಾರತ ಮತ್ತು ವಿಶ್ವದಾದ್ಯಂತ ಸುಮಾರು 5000 ಕೇಂದ್ರಗಳಲ್ಲಿ ಸತ್ಸಂಗ ವಿಹಾರವು ಕಾರ್ಯನಿರತವಾಗಿದೆ.
ಜಾರ್ಖಂಡ್ ರಾಜ್ಯದ ದೇವಘರ್‍ ಲ್ಲಿ ಸತ್ಸಂಗ ವಿಹಾರದ ಪ್ರಧಾನ ಕೇಂದ್ರವಿದ್ದು ಅದರ ಸಂಸ್ಥಾಪಕರಾದ ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ತಮ್ಮ ದಿವ್ಯ ಪ್ರೇಮ ಮತ್ತು ಅಮೃತ ಸಂದೇಶದಿಂದ ಮೃತ್ಯುಗಾಮಿ, ವೃತ್ತಿ ಪರವಶನಾದ ಮನುಷ್ಯನಿಗೆ ಜೀವನ-ವರ್ಧನ ಹಾಗೂ ಪರಮಾನಂದ ಪಥವನ್ನು ತೋರಿಸಿಕೊಟ್ಟಿದ್ದಾರೆ.
ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಅವರ ಚುಂಬಕಿಯ ಆಕರ್ಷಣ, ದಿವ್ಯಪ್ರಭೆ, ಸಹಜತೆ, ಸರಳತೆ ಹಾಗೂ ಅಸಾಧಾರಣ ವ್ಯಕ್ತಿತ್ವಗಳಿಂದ ಕೋಟಿಗಟ್ಟಲೆ ಜನರನ್ನು ತಮ್ಮೆಡೆಗೆ ಆಕರ್ಷಿಸುತ್ತಿದ್ದಾರೆ. ಯಾವುದೇ ಜಾತಿ, ವರ್ಣ, ಸಂಪ್ರದಾಯ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಶ್ರೀಗಳ ಮಾರ್ಗವನ್ನು ಅನುಸರಿಸುತ್ತಾ ತಮ್ಮ ಜೀವನದ ಸಮಸ್ತ ಸಮಸ್ಯೆಗಳಿಗೆ ಸಮಾಧಾನವನ್ನು ಕಂಡುಕೊಳ್ಳುತ್ತಿದ್ದಾರೆ.
ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಯಾವಾಗಲೂ ಪ್ರಾಚೀನ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ನಿರಾಕರಿಸಿಲ್ಲ. ಆದರೆ ಮಧುರ-ಮಿಶ್ರದಲ್ಲಿ ಅಲ್ಲಗಳೆಯಲಾಗದ ಕಾರಣ ಅವುಗಳನ್ನು ವಾಹಕ ಮಾಡುವ ಆಳವಾದ ವೈಜ್ಞಾನಿಕ ಅಂಶಗಳ ಜೊತೆ ಪ್ರಸ್ತುತ ಪಡಿಸಿದ್ದಾರೆ.
ಬೆಂಗಳೂರಿನ ಕೃಷ್ಣರಾಜ ಪುರಂ ಹತ್ತಿರದ ಮೇಡಹಳ್ಳಿಯ ಕರುಣಶ್ರೀ ಲೇಔಟ್‍ನಲ್ಲಿರುವ ಸತ್ಸಂಗ ವಿಹಾರ ಕೇಂದ್ರವು  ಶ್ರೀ ಶ್ರೀ ಠಾಕೂರ ಅನುಕುಳಚಂದ್ರರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಸಾವಿರಾರು ಸದಸ್ಯರೊಂದಿಗೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕರ್ನಾಟಕದಲ್ಲಿ ಸತ್ಸಂಗ ವಿಹಾರದ ಪ್ರಪ್ರಥಮ ಸತ್ಸಂಗ ಶ್ರೀ ಮಂದಿರವನ್ನು ಮೇಡಿಹಳ್ಳಿಯಲ್ಲಿ ನಿರ್ಮಿಸಲಾಗಿದ್ದು ಅದರ ಪ್ರಥಮ ವಾರ್ಷಿಕೋತ್ಸವವನ್ನು ದಿನಾಂಕ 13 ಡಿಸೆಂಬರ್ 2015ರಂದು ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಬÉಳಗಿನಿಂದ ಸಂಜೆಯವರೆಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆ ವೇದ ಸಮಂಗಲಿಕಿ ಮತ್ತು ಶಹನಾಯಿ, ಬೆಳಗ್ಗೆ 5-45ಕ್ಕೆ ಉಷಾ ಕೀರ್ತನೆ, 6-35ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಣಾಮ (ವಿವಿಧ ಭಾಷೆಗಳಲ್ಲಿ ಶ್ರೀ ಶ್ರೀ ಠಾಕೂರರ ದೈವಿಕ ಸಂದೇಶಗಳ ಪಠನೆ), 8-30ಕ್ಕೆ ಸಂಗೀತಾಂಜಲಿ ಭಜನೆ, 9-30ಕ್ಕೆ ನಗರ ಸಂಕೀರ್ತನೆ(ಮೆರವಣಿಗೆ), 11ಗಂಟೆಗೆ ಸಾಮಾನ್ಯಸಭೆ, ಮಧ್ಯಾಹ್ನ 2-30ರ ನಂತರ ಆನಂದ ಬಜಾರ್ ಅನ್ನದಾನ ಪ್ರಸಾದ ಸೇವನೆ, 3-30ಕ್ಕೆ ಮಾತೃ ಸಮ್ಮೇಳನ, ಸಂಜೆ 5-45ಕ್ಕೆ ಸಾಮೂಹಿಕ ಸಂಧ್ಯಾಕಾಲ ಪ್ರಾರ್ಥನೆ, 7ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು, ರಾತ್ರಿ 8ಗಂಟೆಗೆ ಆನಂದಬಜಾರ್ ಅನ್ನದಾನ ಪ್ರಸಾದ ಸೇವನೆ ನಡೆಯಲಿವೆ.
ಈ ಕಾರ್ಯಕ್ರಮಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶ್ರೀ ಶ್ರೀ ಠಾಕೂರರ ಭಗದ್ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಮಂದಿರದ ಸಹಪ್ರತಿ ರುತ್ವಿಕ್ ಅಜಯ್ ಕುಮಾರ್ ಪಾತ್ರ ವಿನಂತಿಸಿಕೊಂಡಿದ್ದಾರೆ.

ಆತಿಥ್ಯ ಕ್ಷೇತ್ರದ ಸಲಹೆ, ಸೇವೆಗಳಿಗೆಂದೇ ಮೀಸಲಾದ ಒಎಂಎಸ್



   ದೇಶದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಮತ್ತು ವ್ಯಾಪಾರ ಕಾರ್ಯಕಲಾಪಗಳು ದಿನೇದಿನೇ ವಿಸ್ತರಿಸುತ್ತಿದ್ದು ಜನರು ವ್ಯಾಪಾರ, ಉದ್ಯೋಗ, ವಿರಾಮ ಮತ್ತಿತರೆ ಕಾರಣಗಳಿಗಾಗಿ ಮನೆಯಿಂದ ಹೊರಗೆ ತಮ್ಮ ದಿನಗಳನ್ನು ಕಳೆಯಬೇಕಾದ ಅನಿವಾರ್ಯತೆ ಹೆಚ್ಚುತ್ತಿದೆ. ಅದರ ಹಿನ್ನೆಲೆಯಲ್ಲಿ ಮಹಾನಗರಗಳಷ್ಡೇ ಅಲ್ಲದೆ ದ್ವಿತೀಯ, ತೃತೀಯ ಶ್ರೇಣಿಯ ನಗರಗಳು, ಪಟ್ಟಣಗಳು, ಪ್ರವಾಸ ಸ್ಥಳಗಳಲ್ಲಿ ಹೋಟೆಲ್‍ಗಳು ಮತ್ತು ರೆಸ್ಟಾರೆಂಟ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿರುವುದನ್ನು ಕಾಣುತ್ತಿದ್ದೇವೆ.
   ಇದರೊಂದಿಗೆ ಹಲವಾರು ಬಹುರಾಷ್ಟ್ರೀಯ ಆತಿಥ್ಯ ಸಂಸ್ಥೆಗಳು ಸಹ ಭಾರತದಲ್ಲಿ ತಮ್ಮ ಹೋಟಲ್‍ಗಳ ಸ್ಥಾಪನೆಗೆ ಮುಂದಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಆತಿಥ್ಯ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಉಂಟಾಗುತ್ತಿದ್ದು ಉತ್ತಮ ಗುಣಮಟ್ಟದ ಸೇವೆಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಬೇಕಾದುದು    ಅನಿವಾರ್ಯವಾಗಿದೆ ಎಂದರೆ ತಪ್ಪಾಗಲಾರದು.
    ಹೋಟಲ್ ಮತ್ತು ರೆಸ್ಟಾರೆಂಟ್ ಮಾಲೀಕರು ಮತ್ತು ಆಡಳಿತ ಮಂಡಳಿಗಳಿಗೆ ಅವುಗಳ ದಿನನಿತ್ಯದ ಕಾರ್ಯಕಲಾಪಗಳ ನಿರ್ವಹಣೆ ಕುರಿತಂತೆ ಎಲ್ಲರೀತಿಯ ಸಲಹೆ, ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡಿ ಅವರ ವ್ಯಾಪಾರದ ಅಭಿವೃದ್ಧಿಗೆ ಸಹಕರಿಸಲು ಮುಂದೆಬಂದಿದೆ ವನ್ ಮ್ಯಾನ್ ಶೋ(ಒಎಂಎಸ್). ಸಚಿನ್ ಬಲದವ ಅವರ ನಾಯಕತ್ವದಲ್ಲಿ ಬೆಂಗಳೂರನ್ನು ಪ್ರಧಾನ ಕೇಂದ್ರವಾಗಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಈಗಾಗಲೆ ಸೂರತ್, ಸೋಲಾಪುರ, ಲಾತೂರ್, ಪುಣೆ, ಮುಂಬೈ, ಗೋವಾ, ಹೈದರಾಬಾದ್‍ಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು ಸದ್ಯದಲ್ಲೆ ದುಬೈಗೆ ವಿಸ್ತರಿಸಲಿದೆ.
    ವನ್ ಮ್ಯಾನ್ ಶೋ ಈಗಾಗಲೆ ನಿರ್ವಹಿಸುತ್ತಿರುವ  ಹೋಟಲ್, ರೆಸ್ಟಾರೆಂಟ್, ಕ್ಯಾಟರಿಂಗ್, ಸ್ಪಾ, ರಿಸಾರ್ಟ್‍ಗಳ ಲೋಪಗಳನ್ನು ಸರಿಪಡಿಸಿ ಸಂಪನ್ಮೂಲಗಳ ಸದ್ಭಳಕೆ ಮತ್ತು ವೆಚ್ಚಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನಮಾಡಿ ಸಲಹೆಗಳನ್ನು ನೀಡುತ್ತದೆ. ಹೊಸದಾಗಿ ಸ್ಥಾಪನೆ ಮಾಡಬೇಕೆಂದಿರುವ ಸಂಸ್ಥೆಗಳಿಗೆ ಅಗತ್ಯ ವಸ್ತುಗಳ ಖರೀದಿ, ಸ್ಥಾಪನೆ, ಆಡಳಿತ, ಲೆಕ್ಕಪತ್ರಗಳ ನಿರ್ವಹಣೆ, ಅಡುಗೆ ಮನೆಯ ಯೋಜನೆ, ಮಾನವ ಸಂಪನ್ಮೂಲಗಳ ನಿರ್ವಹಣೆ, ಮಾರಾಟ ಮತ್ತು ಮಾರ್ಕೆಟಿಂಗ್, ರೆಸ್ಟಾರೆಂಟ್ ಮತ್ತು ಬಾರ್‍ನ ಜೋಡಣೆ, ಆಹಾರ ಪದಾರ್ಥಗಳ ಯೋಜನೆ ಮತ್ತು ಬೆಲೆ ನಿರ್ಧಾರ,  ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಆಯೋಜನೆ, ಸಿಬ್ಬಂದಿ ನಿಯೋಜನೆ ಮತ್ತು ತರಬೇತಿ, ಇಂಜಿನಿಯರಿಂಗ್ ಮತ್ತು ನಿರ್ವಹಣೆ, ಅವುಗಳ ಅಳವಡಿಕೆ ಮುಂತಾದ ಎಲ್ಲರೀತಿಯ ಸೇವೆಗಳನ್ನು ನೀಡುತ್ತದೆ.
   ಸಣ್ಣ ಮತ್ತು ಮಧ್ಯಮ ದರ್ಜೆಯ ಸಂಸ್ಥೆಗಳಿಗೆ ಸುಲಭವಾದ ಹೂಡಿಕೆಯೊಂದಿಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಅನುವಾಗುವಂತೆ ಅವರವರ ಅಗತ್ಯಕ್ಕೆ ತಕ್ಕಂತೆ ಫ್ರಾಂಚೈಸಿ ಮಾದರಿಗಳನ್ನು ಸೃಷ್ಟಿಸಿಕೊಡಲಾಗುತ್ತಿದೆ.
   ಆತಿಥ್ಯ ಮತ್ತು ಪ್ರವಾಸೋದ್ಯಮದಲ್ಲಿ ಬೆಂಗಳುರು ದೇಶದಲ್ಲಿಯೇ ಅತಿ ವೇಗವಾಗಿ ಮುಂದುವರೆಯುತ್ತಿರುವ ನಗರವಾಗಿದ್ದು ಇಲ್ಲಿನ ಮಾಹಿತಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಯಿಂದಾಗಿ ಇಲ್ಲಿ ಆತಿಥ್ಯ ಉದ್ಯಮಕ್ಕೆ ಅವಕಾಶಗಳೂ ಹೆಚ್ಚಾಗುತ್ತಿವೆ ಎನ್ನುತ್ತಾರೆ ಒಎಂಎಸ್‍ನ ಮುಖ್ಯಸ್ಥರಾದ ಸಚಿನ್ ಬಲದವ.

Saturday, December 05, 2015

ರಾಷ್ಟ್ರಿಯ ಕೃಷಿ ವಿಮಾ ಯೋಜನೆ : ರೈತರಿಗೆ ಮಾಹಿತಿ

ಬೆಂಗಳೂರು : ಕೃಷಿ ಇಲಾಖೆಯು ಬೆಳೆ ವಿಮಾ ಯೋಜನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ಗಮನಕ್ಕೆ ಈ ಕೆಳಕಂಡ ಮಾಹಿತಿಯನ್ನು ತರಲು ಬಯಸುತ್ತದೆ.
      2015-16 ಹಿಂಗಾರು ಹಂಗಾಮಿನಲ್ಲಿ ಹಾಗೂ ಬೇಸಿಗೆ ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಎಲ್ಲಾ ಆಹಾರ ಮತ್ತು ಎಣ್ಣೆಕಾಳು ಬೆಳೆಗಳನ್ನು ಅಧಿಸೂಚಿಸಲಾಗಿದೆ.ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ. ಈ ಯೋಜನೆಯು ಬೆಳೆಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿದ್ದು, ಬೆಳೆಸಾಲ ಪಡೆಯದಂತಹ ರೈತರಿಗೆ ಐಚ್ಪಿಕವಾಗಿರುತ್ತದೆ.
       ಇತರೆ ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ/ಖಾತೆ ಪತ್ರ/ಕಂದಾಯ ರಶೀದಿ ನೀಡಬೇಕು. ಗ್ರಾಮ ಲೆಕ್ಕಿಗರಿಂದ ಬಿತ್ತನೆ ದೃಢೀüಕರಣ ಪತ್ರ ಪಡೆದು ನೀಡಬೇಕು. ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವಿಮಾ ಕಂತನ್ನು ಕಟ್ಟಬೇಕು. ಯೋಜನೆಯಡಿ ಪಾಲ್ಗೊಳ್ಳುವ ಸಮಯದಲ್ಲಿ ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ ನಂತರ 30 ದಿವಸದೊಳಗಿನ ಹಗೂ ಆರೋಗ್ಯಕರವಾಗಿರುವ ಬೆಳೆಗಳನ್ನು ನೊಂದಾಯಿಸಬಹುದು.
       ವಿಮಾ ಕಂತು-ಗೋಧಿ ಬೆಳೆಗೆ 1.5% ಹಾಗೂ ಉಳಿದ ಎಲ್ಲಾ ಅಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ – 2.00% ಪಾವತಿಸಬೇಕಾಗುತ್ತದೆ. ಇದರಲ್ಲಿ ಬೆಳೆ ವಿಮಾ ಯೊಜನೆಯಡಿ ಒಲಪಡುವ ಎಲ್ಲಾ ಸಣ್ಣ/ಅತಿಸಣ್ಣ ರೈತರಿಗೆ 10% ರಿಯಾಯಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಲ್ಲಾ ರೈತರಿಗೆ ವಿಮಾ ಕಂತಿನಲ್ಲಿ ಶೇ 90 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
       ಹಿಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದೇ ಇರುವ ಎಲ್ಲಾ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ 31-12-2015 ಹಾಗು ಬೇಸಿಗೆ ಹಂಗಾಮಿನಲ್ಲಿ ಬೆಳೆಸಾಲ ಪಡೆಯದ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ 28-2-2016 ಹಗೂ ಬೆಳೆ ಸಾಲ ಪಡೆಯುವ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ : 31-03-2016 ಆಗಿರುತ್ತದೆ.
       ಪ್ರಕೃತಿ ವಿಕೋಪ ಅಂದರೆÀ, ಆಲೀಕಲ್ಲು ಮಳೆ, ಪ್ರವಾಹ, ಭೂ ಕುಸಿತ ಮತ್ತು ಚಂಡಮಾರುತ ಇವುಗಳಿಂದ ಬೆಳೆ ನಷ್ಟ ಸಂಭಿಸಿದಲ್ಲಿ 2015-2016 ರ ಹಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹರವನ್ನು ನೀಡಲಾಗುವುದು. ಈ ಕಾರಣಗಳಿಂದ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ 48 ಗಂಟೆಯೊಳಗೆ ಅರ್ಜಿಯನ್ನು ಸಂಬಂಧಿತ ಬ್ಯಾಂಕಿನಲ್ಲಿ ಅಥವಾ ನೇರವಾಗಿ ಅಗ್ರಿಕಲ್ಷರ್ ಇನ್ಸೂರೆನ್ಸ್ ಕಂಪನೆ ಆಫ್ ಇಂಡಿಯಾ ಲಿ., ಬೆಂಗಳೂರು ಇವರಿಗೆ ನೀಡಬೇಕು. ಅರ್ಜಿಯಲ್ಲಿ ಬೆಳೆಯ ವಿವರಗಳನ್ನು ನಷ್ಟಕ್ಕೆ ಕಾರಣವನ್ನು ಹಾಗೂ ಬೆಳೆ ನಷ್ಟದ ವ್ಯಾಪ್ತಿಯ ವಿವರಗಳನ್ನು ನೀಡಬೇಕು. ವಿಮಾ ಸಂಸ್ಥೆಯು ವಿವರಗಳನ್ನು ಪಡೆದು ನಷದಟ ನಿರ್ಧಾರಕರನ್ನು ರೈತರ ಜಮೀನಿಗೆ ಕಳುಹಿಸಿಕೊಡುತ್ತಾರೆ.
       ಈ ಅವಕಾಶವನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ಯೋಜನೆಯಡಿಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವುದು.